ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾರನ್ನೂ ಬಿಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮನವಿ ಮಾಡಿದ್ದಾರೆ.
ನಿನ್ನೆ ನಡೆದ ಕೇಂದ್ರ ಏಜೆನ್ಸಿಯ ವಜ್ರಮಹೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ಸಿಬಿಐ ಅಧಿಕಾರಿಗಳಿಗೆ ʻದೇಶವು ನಿಮ್ಮೊಂದಿಗಿದೆ, ನಿಮ್ಮ ಕೆಲಸದತ್ತ ಗಮನ ಹರಿಸಿʼ ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿಯ ಪ್ರತಿಸ್ಪರ್ಧಿಗಳಿಗೆ ಕಿರುಕುಳ ನೀಡಲು ಕೇಂದ್ರವು ತನ್ನ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪದ ನಡುವೆ ಪ್ರಧಾನಿ ಮೋದಿಯವರ ಈ ಹೇಳಿಕೆಗಳು ಬಂದಿವೆ.
‘ಭ್ರಷ್ಟಾಚಾರವನ್ನು ತೊಡೆದುಹಾಕುವುದು ಸಿಬಿಐನ ಪ್ರಾಥಮಿಕ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಮಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ. ಕೆಲವು ಆರೋಪಿಗಳು ಪ್ರಬಲ ವ್ಯಕ್ತಿಗಳಾಗಿದ್ದು, ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ತನಿಖಾ ಸಂಸ್ಥೆಗಳನ್ನು ಗುರಿಯಾಗಿಸುತ್ತಾರೆ’ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ನೀವು ನಿಮ್ಮ ಕೆಲಸದತ್ತ ಗಮನ ಹರಿಸಬೇಕು, ದೇಶವು ನಿಮ್ಮೊಂದಿಗಿದೆ ಎಂದು ಅವರು ಹೇಳಿದರು.
ಅಧಿಕಾರಿಗಳು ಎಷ್ಟೇ ಶಕ್ತಿವಂತರಿದ್ದರೂ ಭ್ರಷ್ಟರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ‘ಇಂತಹ ಜನರು ನಿಮ್ಮನ್ನು ವಿಚಲಿತಗೊಳಿಸುತ್ತಾರೆ, ಆದರೆ ನೀವು ನಿಮ್ಮ ಕೆಲಸದತ್ತ ಗಮನ ಹರಿಸಬೇಕು. ಯಾವುದೇ ಭ್ರಷ್ಟರನ್ನು ಬಿಡಬಾರದು. ನಮ್ಮ ಪ್ರಯತ್ನದಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದು ದೇಶದ ಆಶಯ, ಇದು ದೇಶವಾಸಿಗಳ ಆಶಯ. ದೇಶ, ಕಾನೂನು ಮತ್ತು ಸಂವಿಧಾನ ನಿಮ್ಮೊಂದಿಗಿದೆ ಎಂದು ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.