ನಟ ಕಿಚ್ಚ ಸುದೀಪ್ ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಸಿದ್ದವಾಗಿದ್ದಾರೆ. ಆದರೆ ಈ ಮಧ್ಯೆ ಸುದೀಪ್ ಗೆ ಬೆದರಿಕೆ ಪತ್ರ ಬಂದಿದ್ದು, ಇದೀಗ ಈ ಕೇಸ್ ಸಿಸಿಬಿಗೆ ವರ್ಗಾವಣೆ ಆಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದು, ಪತ್ರಬರೆದ ಕಿಡಿಗೇಡಿಯನ್ನು ಹುಡುಕಲಾಗುತ್ತಿದೆ.
ಸುದೀಪ್ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದ್ದು, ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ‘ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು’ ಎಂದು ಮಂಜು ದೂರಿದ್ದು, ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ. ಈ ಪ್ರಕರಣ ಈಗ ಸಿಸಿಬಿಗೆ ವರ್ಗಾವಣೆ, ಈ ಸಂಬಂಧ ನಗರದಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ, ಬೆದರಿಕೆ ಹಾಕಿದ ವ್ಯಕ್ತಿಗಳಿಗೆ ನಮ್ಮ ಮನೆಯ ವಿಳಾಸ ಗೊತ್ತಿದೆ. ಲೆಟರ್ ಹಾಕಿದ್ದಾರೆ, ಪೊಸ್ಟ್ ಬಂದಿದೆ. ಆ ವಿಚಾರವನ್ನು ಶೀಘ್ರದಲ್ಲೇ ಹೊರ ತೆಗೆಯುತ್ತೇನೆ. ಪೊಸ್ಟ್ಗೆ ಯಾವ ರೀತಿ ಉತ್ತರ ಕೊಡ್ಬೇಕೋ ಕೊಡ್ತೀನಿ. ಇದು ಚಿತ್ರರಂಗದ ಕೆಲವರದ್ದೇ ಕೈವಾಡ ಎಂದು ಹೊಸ ಬಾಂಬ್ ಹಾಕಿದರು. ಯಾರ ಕೈವಾಡ ಎಂದು ನನಗೆ ಗೊತ್ತು. ನಾನು ಯಾವುದಕ್ಕೂ ಹೆದರುವವನಲ್ಲ. ಈ ಮೊದಲು ಇ-ಮೇಲ್ ಬರುತ್ತಿತ್ತು ಎಂದರು.