
ಮಧುಗಿರಿ ಪುರಸಭೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅನಧೀಕೃತ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಸುದ್ದಿಯಲ್ಲಿದ್ದ ಹರಾಜು ಪ್ರಕರಣವು ಲಂಚಕೋರತನದಲ್ಲಿ ಮುಳುಗಿವೆ ಎಂಬ ವದಂತಿಗಳು ಕೇಳುತ್ತಿವೆ. ಇದಾಗಿ ಕೆಲವೇ ದಿನಗಳಲ್ಲಿ ಮಧುಗಿರಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್-07, ಕಾರ್ಯಪ್ಪ ಬಡಾವಣೆಯ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ಈ ಸ್ವತ್ತು ಅನಧಿಕೃತವಾಗಿ ನಿರ್ಮಿಸಿದ ಬಡಾವಣೆಗೆ ಸೇರಿದ ಸ್ವತ್ತಾಗಿದ್ದು ಈ ಬಡಾವಣೆಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ನಿಯಮಗಳನ್ನು ಪಾಲಿಸದೇ ಆಸ್ತಿ ಸಂಖ್ಯೆ: 7244/706/17 ಸ್ವತ್ತನ್ನು ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಈ ಅನಧಿಕೃತ ಬಡಾವಣೆಯ ಆಸ್ತಿಗೆ ಇ-ಖಾತಾ ನಕಲನ್ನು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.



ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿ ಸುರೇಶ್, ಕಂದಾಯಾಧಿಕಾರಿ ವಸಂತಕುಮಾರಿ, ಪ್ರಭಾರ ಕಂದಾಯ ನಿರೀಕ್ಷಕರಾದ ಡಿ.ಎನ್. ಮಂಜುನಾಥ್ ಮತ್ತು ವಿಷಯ ನಿರ್ವಾಹಕರಾದ (ಎಸ್.ಡಿ.ಎ) ಎಲ್.ವಿ ಜಗದೀಶ್ ಇವರುಗಳು ವಾರ್ಡ್ ನಂಬರ್-07 ರ ಕಾರ್ಯಪ್ಪ ಬಡಾವಣೆಯ ಲಿಂಗೇನಹಳ್ಳಿಗೆ ಸೇರಿದ ಆಸ್ತಿ ಸಂಖ್ಯೆ: 7244/706/17 ರ ಸ್ವತ್ತನ್ನು ಅನಧಿಕೃತವಾಗಿ ಬಡಾವಣೆಗೆ ಸೇರಿಸಿದ್ದು, ಸರ್ಕಾರದ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದೇ, ಅನಧಿಕೃತ ಬಡಾವಣೆಯ ಆಸ್ತಿಗೆ ಇ-ಖಾತಾ ನಕಲನ್ನು ನೀಡಿರುತ್ತಾರೆ ಎಂದು ಕಾಳಜಿ ಫೌಂಡೇಶನ್ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಆರೋಪಿಸಿದ್ದಾರೆ.

ಅಲ್ಲದೇ, ಇವರು ಸ್ವಹಿತಾಸಕ್ತಿಯ ಉದ್ದೇಶದಿಂದ ಸರ್ಕಾರದ ನಿಯಮ/ಕಾನೂನುಗಳನ್ನು ಕಡೆಗಣಿಸಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ಅನಧಿಕೃತ ಬಡಾವಣೆಗೆ ಇ-ಖಾತಾ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಿರುವುದಂತೂ ಸತ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕುವಂತಹ ಅಧಿಕಾರಿಗಳಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ. ಆದ್ದರಿಂದ ಕರ್ನಾಟಕದ ಲೋಕಾಯುಕ್ತರ ನಿಯಮದ ಪ್ರಕಾರ ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿರುವ ಸಂಗತಿಯೂ ನಡೆದಿದೆ.
ಸಂಬಂಧಪಟ್ಟ ಲೋಕಾಯುಕ್ತ ಅಧಿಕಾರಿಗಳು ಇದನ್ನು ಪರಿಶೀಲಿಸಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕಿದೆ. ಇವರುಗಳ ವಿರುದ್ಧ ತುಮಕೂರಿನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ್ ರವರು ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ಕಾಳಜಿ ಫೌಂಡೇಶನ್ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಒತ್ತಾಯಿಸಿದ್ದಾರೆ.